Udupi district, Karnataka
ದಾನಶಾಲಾ ಮಠದ ಶ್ರೀ ಚಂದ್ರಪ್ರಭ ಸ್ವಾಮಿ ಬಸದಿ
ಶ್ರೀ ದಾನಶಾಲಾ ಮಠದ ಈ ಬಸದಿಯು ಮಠದ ಒಳಗಡೆ ಪ್ರಾಂಗಣದಲ್ಲಿ ಉತ್ತರಾಭಿಮುಖವಾಗಿ ನಿರ್ಮಾಣವಾಗಿದೆ. ಆದುದರಿಂದ ಇದಕ್ಕೆ ವಿಶೇಷವಾದ ಭದ್ರತೆ ಇದೆ. ಶ್ರೀ ಸ್ವಾಮೀಜಿಯವರನ್ನು ಭೇಟಿಯಾಗಲು ಬರುವ ಎಲ್ಲಾ ಶ್ರಾವಕರು ಹಾಗೂ ಭಕ್ತಾಭಿಮಾನಿಗಳು ದರ್ಶನ ಪಡೆಯುವ ಆದರಣೀಯ ಬಸದಿ ಇದು. ಇತಿಹಾಸವು ತಿಳಿಸುವಂತೆ ಸ್ಥಳೀಯ ಭೈರರಸ ಒಡೆಯನು ಪನಸೋಗೆಯ ಧರ್ಮಪೀಠದಲ್ಲಿ ಪಟ್ಟಾಭಿಷಿಕ್ತರಾಗಿದ್ದ ಲಲಿತಕೀರ್ತಿ ಭಟ್ಟಾರಕರನ್ನು ಕಾರ್ಕಳಕ್ಕೆ ಆಹ್ವಾನಿಸಿ ಮಠವನ್ನು ನಿರ್ಮಿಸಿ ಅದರೊಳಗೆ ಚಿಕ್ಕದಾದ ಈ ಸುಂದರ ಬಸದಿಯನ್ನು ನಿರ್ಮಿಸಿದ.
ಈ ಬಸದಿಗೆ ನಮಸ್ಕಾರ ಮಂಟಪ ಮತ್ತು ಗರ್ಭಗೃಹ ಗಳೆಂಬ ಎರಡು ಮಂಟಪಗಳಿವೆ. ಎದುರಿನ ನಮಸ್ಕಾರ ಮಂಟಪಕ್ಕೆ ಮತ್ತು ಗರ್ಭಗೃಹಕ್ಕೆ ಸುತ್ತುವರಿದು ಒಂದು ಪಕ್ಷಿಣಾ ಪಥವಿದೆ. ಇದಕ್ಕೆ ಅಮೃತಶಿಲೆಯ ಫಲಕಗಳನ್ನು ಹಾಕಿ ಆಕರ್ಷಕಗೊಳಿಸಲಾಗಿದೆ. ಹಾಗೆಯೇ ನಮಸ್ಕಾರ ಮಂಟಪದ ಮಧ್ಯದಲ್ಲಿ ಜೈನಿಸ್ ಹೆಂಚುಗಳನ್ನು ಹಾಸಲಾಗಿದೆ. ಗರ್ಭಗೃಹದಲ್ಲಿ ಪಂಚಲೋಹದಿಂದ ಮಾಡಿದ ಖಡ್ಗಾಸನ ಭಂಗಿಯ ವಿಗ್ರಹದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯು ವಿರಾಜಮಾನರಾಗಿದ್ದಾರೆ. ಕಾಲುಗಳ ಪ್ರದೇಶದಲ್ಲಿ ವಿಜಯಯಕ್ಷ ಮತ್ತು ಜ್ವಾಲಾಮಾಲಿನಿಯಕ್ಷಿ ನಿಂತ ಭಂಗಿಯಲ್ಲಿ ಕಂಗೊಳಿಸುತ್ತಿದ್ದಾರೆ. ಮಾತೆ ಕೂಷ್ಮಾಂಡಿನಿ ದೇವಿಯು ಸನ್ನಿಹಿತರಾಗಿ ಈ ಸಮಗ್ರ ಭಗವತ್ ಮಂಟಪವನ್ನು ಪವಿತ್ರೀಕರಿಸಿದ್ದಾರೆ. ಹಾಗೂ ಈ ಸಮಗ್ರ ರಾಜ್ಯದ ಹಿತರಕ್ಷಣೆಯನ್ನು ನೋಡುತ್ತಿದ್ದಾರೆ.
ಶ್ರೀ ಚಂದ್ರಪ್ರಭ ಸ್ವಾಮಿಯ ಹಿಂದೆ ಲೋಹದ ಸುಂದರವಾದ ಪ್ರಭಾವಳಿ ಇದೆ. ಅದರಲ್ಲಿ ಸ್ವಾಮಿಯ ಎರಡೂ ಬದಿಗಳಲ್ಲಿ ಅಂಕಣಗಳನ್ನು ಹೊಂದಿದ ಕಂಬದಂತಹ ರಚನೆಗಳಿದ್ದು ಅವುಗಳ ಮೇಲ್ಗಡೆ ಮಕರ ಮೃಗಗಳೂ ಅವುಗಳ
ಬಾಯಿಗಳಿಂದ ಹೊರಟ ಮಕರ ತೋರಣವೂ ಈ ಪ್ರಭಾವಳಿಯನ್ನು ಆಲಂಕಾರಗೊಳಿಸಿವೆ. ಇದರ ಹೊರ ಭಾಗದಲ್ಲಿ ಎರಡು ಹಂತದ ಅಲಂಕಾರಿಕ ರಚನೆಗಳು ಇವೆ. ಸ್ವಾಮಿಯ ಇಕ್ಕೆಲೆಗಳಲ್ಲಿ ಪ್ರಭಾವಳಿಯಲ್ಲಿ ಚಾಮರಗಳಿವೆ. ಶಿರಸ್ಸಿನ ಮೇಲ್ಗಡೆ ಮುಕ್ಕೋಡೆ ಇದೆ. ಪ್ರಭಾವಳಿಯ ಮಧ್ಯದಲ್ಲಿ ಎಲ್ಲಕ್ಕಿಂತ ಮೇಲೆ ಕೀರ್ತಿ ಮುಖವಿದೆ. ಇವೆಲ್ಲವೂ ವಿಜಯ ನಗರ ಕಾಲದ ಪ್ರತಿಮಾಶಾಸ್ತ್ರಕ್ಕೆ ಕೊಟ್ಟ ಆದರ್ಶ ಕೊಡುಗೆಯಾಗಿವೆ,
ಶ್ರೀ ಜೈನ ಮಠವು ಹಿಂದೆ ದಾನಧರ್ಮಗಳಿಗೆ ಹೆಸರುವಾಸಿಯಾಗಿದ್ದಂತೆ ಶಿಕ್ಷಣವನ್ನು ಒದಗಿಸುವ ಮೂಲಕೇಂದ್ರವೂ ಆಗಿತ್ತು. ಈ ಮಠದ ಭಟ್ಟಾರಕರಾದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ರಾಜಯೋಗಿಗಳೂ ಆಗಿ ಸ್ಥಳೀಯ ಭೈರವ ಆರಸರಿಗೆ ರಾಜ ಗುರುಗಳೂ ಆಗಿದ್ದರು. ಕಾಲಕಾಲಕ್ಕೆ ಆರಸರಿಗೆ ಮಾರ್ಗದರ್ಶನವನ್ನು ಕೊಟ್ಟು ಮುನ್ನಡೆಸುತ್ತಿದ್ದರು. ಶ್ರೀ ಚಂದ್ರಪ್ರಭ ಸ್ವಾಮಿಯು ಸನ್ನಿಹಿತರಾಗಿರುವ ಈ ಮಠವು ಇತಿಹಾಸ ಕಾಲದಲ್ಲಿ ಪ್ರಸಿದ್ಧವಾದ ಒಂದು ಆಧ್ಯಾತ್ಮಿಕ ಕೇಂದ್ರವಾಗಿತ್ತು. ಇಲ್ಲಿಯ ಭಟ್ಟಾರಕರು ರಾಜ ತಾಂತ್ರಿಕತೆಯಲ್ಲಿ ಮಾರ್ಗದರ್ಶಕರಾಗಿದ್ದಂತೆ ಧ್ಯಾನಯೋಗಿಗಳು ಆಗಿ ಸಾಹಿತ್ಯ ಕಲೆಗಳ ಪುರೋಭಿವೃದ್ಧಿಗೆ ಆಶ್ರಯದಾತರೂ ಆಗಿದ್ದರು. ಸ್ವತಃ ವಿದ್ವಾಂಸರಾಗಿದ್ದ ಇಲ್ಲಿಯ ಭಟ್ಟಾರಕರೊಬ್ಬರು ಜೈನ ಮಹಾಪುರಾಣಕ್ಕೆ ಶಬ್ದಾರ್ಥ ವಿವರಣೆಯನ್ನೂ ಸಮಗ್ರ ವ್ಯಾಖ್ಯಾನವನ್ನೂ ರಚಿಸಿದ್ದರು. ಈ ಮಹದ್ಗಂಥವು ತಾಡಪತ್ರಗಳ ರೂಪದಲ್ಲಿ ಇಂದಿಗೂ ಮೂಡುಬಿದಿರೆಯ ಶ್ರೀ ರಮಾರಾಣಿ ಜೈನ ಸಂಶೋಧನಾ ಕೇಂದ್ರದಲ್ಲಿ ಇದೆ. ಅದರಂತೆ ಇಲ್ಲಿಯ ಸ್ವಸ್ತಿಶ್ರೀ ಭಟ್ಟಾರಕರುಗಳು ಕವಿಗಳಿಗೂ ವಾಸ್ತು ಶಿಲ್ಪಿಗಳಿಗೂ ಆಶ್ರಯದಾತರಾಗಿದ್ದು ಇಲ್ಲಿಯ ಹಲವಾರು ಜಿನ ಚೈತ್ಯಾಲಯಗಳ ನಿರ್ಮಾಣಕ್ಕೆ ಮಾರ್ಗದರ್ಶನ ಕೊಡುತ್ತಿದ್ದರು. ಆ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬಂದಿದೆ.